ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ದಾದಾ ಹಜ್ರತ್ ಮೀರ್ಖಲಂದರ್ ಅವರ ಗ್ಯಾರವಿ ಹಬ್ಬವನ್ನು ಬಾಬಾಬುಡನ್ಗಿರಿಯಲ್ಲಿ ಕರ್ನಾಟಕ ರಾಜ್ಯ ಹಜರತ್ ಟಿಪ್ಪೂ ಸುಲ್ತಾನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಚರಿಸಲಾಯಿತು.
ಕಳೆದ ೧೨ ವರ್ಷಗಳಿಂದ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಜಮ್ಷೀದ್ಖಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಗ್ಯಾರವಿ ಆಚರಣೆಯಲ್ಲಿ ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಭಾಗವಹಿಸಿ ಭಕ್ತಿಯ ನಮನ ಸಲ್ಲಿಸಿದರು.
ಕಾರ್ಯಕ್ರಮದ ಅಂಗವಾಗಿ ಬಾಬಾಬುಡನ್ಗಿರಿಯಲ್ಲಿ ಮೆರವಣಿಗೆ ನಡೆಸಲಾಗಿದ್ದು, ಭಕ್ತರ ಜೊತೆಗೆ ದಬ್ ಮಕ್ಕಳ ಭಕ್ತಿಗೀತೆಯೊಂದಿಗೆ ಮೆರವಣಿಗೆ ಚಾಲನೆ ನೀಡಲಾಯಿತು.
ಫಕೀರರು, ಸೂಫಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಧಾರ್ಮಿಕ ಗೀತೆಗಳೊಂದಿಗೆ ಪ್ರಪಂಚದ ಮಾನವ ಕುಲಕ್ಕೆ ಹಾಗೂ ಎಲ್ಲಾ ಧರ್ಮೀಯರಲ್ಲಿ ಶಾಂತಿ, ನೆಮ್ಮದಿ ನೆಲಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಗ್ಯಾರವಿ ಹಬ್ಬಕ್ಕೆ ಆಗಮಿಸಿದ್ದ ಭಕ್ತರಿಗೆ ಮಧ್ಯಾಹ್ನದ ನಮಾಜಿನ ನಂತರ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು. ಹಜರತ್ ಟಿಪ್ಪೂ ಸುಲ್ತಾನ್ ಚಾರಿಟೇಬಲ್ ಟ್ರಸ್ಟ್ ನಿಂದ ಗಿರಿಯಲ್ಲಿ ನಡೆದ ಈ ಗ್ಯಾರವಿ ಹಬ್ಬ ಆಚರಣೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.